ಬ್ಯಾಂಕಿಂಗ್ ಓಂಬಡ್ಸ್ ಮನ್ -ಓಂಬಡ್ಸ್‌ಮನ್ ಎಂದರೆ ಶಾಸಕಾಂಗದಿಂದ ನೇಮಕಗೊಂಡ ವ್ಯಕ್ತಿಯಾದ ಇವನು ಖಾಸಗಿ ವ್ಯಕ್ತಿಗಳಿಂದ ಸರ್ಕಾರದ ಕೆಲಸ-ಕಾರ್ಯಗಳ ಮೇಲೆ ಬರುವ ದೂರುಗಳನ್ನು ಸ್ವೀಕರಿಸುವ, ಶೋಧಿಸಿ ಪರಿಶೀಲಿಸುವ ಮತ್ತು ನಂತರ ಅದರ ವರದಿಯನ್ನು ಮಂಡಿಸುವವನು. == ಇತಿಹಾಸ == ಈ ಪದವು ಮೂಲತಃ ಸ್ವೀಡಿಷ್ ಮೂಲದ ಓಂಬಡ್ಸ್‌ಮನ್ ಪದದಿಂದ ಬಂದಿದೆ. ಸ್ವೀಡಿಷ್‍ನಲ್ಲಿ ಇದಕ್ಕೆ ದೂರುವುಳ್ಳ ವ್ಯಕ್ತಿ ಎಂದು ಅರ್ಥ. ಇದು ಮೂಲತಃ ಸ್ಕಾಂಡಿನೇವಿಯ ದೇಶದಲ್ಲಿ ಪ್ರಾರಂಭವಾಯಿತು. ಆದರೆ ಬ್ರಿಟನ್ನಿನ ವಿಮಾ ಕೈಗಾರಿಕೆಯಲ್ಲಿ ಇದು ಮೊದಲಿಗೆ ರೂಪ ತಾಳಿ ವಿಕಸನಗೊಂಡಿತು. == ಭಾರತದಲ್ಲಿ == ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆಯು ಎಲ್ಲ ಬ್ಯಾಂಕುಗಳ ನೆರವಿನಿಂದ ಸ್ವಯಂ ಯೋಜನೆಯಾಗಿ ರೂಪುಗೊಂಡು ಜನವರಿ, 1986 ರಿಂದ ಕಾರ್ಯವನ್ನಾರಂಭಿಸಿದರೂ ಇದು ಒಂದು ನಿರ್ದಿಷ್ಟ ಯೋಜನೆಯಾಗಿ ರೂಪುಗೊಂಡು ರಿಸರ್ವ್ ಬ್ಯಾಂಕಿನಲ್ಲಿ ಒಂದು ಶಾಖೆಯಾಗಿ ಕಾರ್ಯ ಮಾಡತೊಡಗಿದ್ದು 1995ರಿಂದ. ಮತ್ತೆ ಇದು 2002ರಲ್ಲಿ ಪರಿಷ್ಕøತಗೊಂಡು ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆ, 2002 ಎಂದು 2002ರಲ್ಲಿ ಜಾರಿಗೆ ಬಂದಿತು. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1948ರ ಅಧಿನಿಯಮ 35-ಂ ಅನ್ವಯ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. == ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆ (ಕಾಯಿದೆ) == ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆ (ಕಾಯಿದೆ) ಯು ಆರು ಅಧ್ಯಾಯಗಳಲ್ಲಿದ್ದು ಅವುಗಳ ವಿವರ ಹೀಗಿದೆ. ಮೊದಲ ಅಧ್ಯಾಯವು ಪೀಠಿಕೆಯಾಗಿದ್ದು ಯೋಜನೆಯ ಪೂರ್ಣ ಹೆಸರು, ಬ್ಯಾಂಕುಗಳ ವಿವರಣೆಯೊಂದಿಗೆ ಇದರಲ್ಲಿ ಬರುವ ಹಲವಾರು ತಾಂತ್ರಿಕ ಶಬ್ದಗಳ ಅರ್ಥದ ವ್ಯಾಖ್ಯೆ ಇದೆ. ಎರಡನೆಯ ಅಧ್ಯಾಯದಲ್ಲಿ ಈ ಬ್ಯಾಂಕಿಂಗ್ ಓಂಬಡ್ಸ್‍ಮನ್ ಕಛೇರಿಯ ಸ್ಥಾಪನೆ ಬಗ್ಗೆ, ಮೂರನೇಯ ಅಧ್ಯಾಯದಲ್ಲಿ ಇದರ ಕಾರ್ಯ ಕ್ಷೇತ್ರ ವ್ಯಾಪ್ತಿ ಹಾಗು ಬ್ಯಾಂಕಿಂಗ್ ಓಂಬಡ್ಸ್‍ಮನ್‍ನ ಅಧಿಕಾರ ಮತ್ತು ಕರ್ತವ್ಯಗಳ ವಿವರಣೆಯಿದೆ. ನಾಲ್ಕನೆಯ ಅಧ್ಯಾಯದಲ್ಲಿ ದೂರುಗಳ ಸ್ವೀಕಾರ ಕ್ರಮ ಮತ್ತು ಅದರ ನಿವಾರಣೆ ಮತ್ತು ಪರಿಹಾರ ವಿಧಿ, ವಿಧಾನಗಳು ವಿವರಿಸಲಾಗಿದೆ. ಐದನೆಯ ಅಧ್ಯಾಯದಲ್ಲಿ ವ್ಯಾಜ್ಯ ತೀರ್ಮಾನ ಮಧ್ಯಸ್ಥಿಕೆ ಮತ್ತು ರಾಜಿ, ತೀರ್ಮಾನಗಳ ವಿವರಣೆಯನ್ನು ಕೊಡಲಾಗಿದೆ. ಕೊನೆಯದಾದ ಆರನೆಯ ಅಧ್ಯಾಯದಲ್ಲಿ ಇತರ ವಿಷಯಗಳನ್ನು ವಿವರಿಸಲಾಗಿದೆ. ಕೊನೆಯಲ್ಲಿ ಈ ಎಲ್ಲ ಕ್ರಮಗಳಿಗೆ ಬೇಕಾದ ನಮೂನೆಗಳು, ಓಂಬಡ್ಸ್‍ಮನ್ ಕಛೇರಿಗಳ ಪಟ್ಟಿ ಮೊದಲಾದವುಗಳನ್ನು ಕೊಡಲಾಗಿದೆ. == ಜಾರಿ == ಭಾರತೀಯ ರಿಸರ್ವ್ ಬ್ಯಾಂಕ್ ದಿನಾಂಕ 14ನೇ ಜೂನ್, 2002 ರಂದು ಈ ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆ, 2002 ಪ್ರಕಟಿಸಿ ಅಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಈ ಯೋಜನೆಯ ಉದ್ದೇಶಗಳು ಎರಡು. ಅವೇನೆಂದರೆ, ಬ್ಯಾಂಕಿಂಗ್‍ನ ವಿವಿಧ ಸೇವೆಗಳ ಬಗೆಗಿನ ದೂರುಗಳನ್ನು ಸ್ವೀಕರಿಸಿ ಸಮಾಧಾನಕರವಾದ ತೀರ್ಮಾನ ನೀಡುವ ಸೌಲಭ್ಯವನ್ನು ವಿಸ್ತರಿಸುವುದು ಹಾಗೂ,ಮಧ್ಯಸ್ತಿಕೆ, ವಿಚಾರಣೆ, ರಾಜಿ ಸೂತ್ರಗಳ ಮೂಲಕ ಬ್ಯಾಂಕು ಹಾಗು ವ್ಯಕ್ತಿ ನಡುವಣ ಭಿನ್ನಾಭಿಪ್ರಾಯಗಳನ್ನು ನಿವಾರಿಸುವುದು ಮತ್ತು ಎರಡು ಬ್ಯಾಂಕುಗಳ ನಡುವಣ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು. ಎಲ್ಲ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಇದರ ವ್ಯಾಪ್ತಿಗೆ ಬರುತ್ತವೆ. ಆದರೆ ಕ್ಷೇತ್ರೀಯ ಗ್ರಾಮೀಣ ಬ್ಯಾಂಕುಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಬ್ಯಾಂಕ್ ಆಗಿರಲಿ, ಅದು ದೇಶೀಯದೇ ಆಗಿರಲಿ, ವಿದೇಶೀಯವೇ ಆಗಿರಲಿ ಇದರ ವ್ಯಾಪ್ತಿಗೆ ಬರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ಧಾರದಂತೆ ಬ್ಯಾಂಕಿಂಗ್ ಓಂಬಡ್ಸ್‍ಮನ್ ಕಛೇರಿಯಲ್ಲಿ ಎಲ್ಲಿ ಬೇಕಾದರೂ ತೆರೆಯಬಹುದು. ಸಧ್ಯದಲ್ಲಿ ಇದರ ಕಛೇರಿಗಳು ಈ ಕೆಳಗಿನ ಊರುಗಳಲ್ಲಿ ಇವೆ : ಮುಂಬಯಿ, ಭೂಪಾಲ್, ನವ ದೆಹಲಿ, ಕೊಲ್ಕತ್ತ, ಭುವನೇಶ್ವರ್. ಚೆನ್ನೈ, ಗೌಹಾಟಿ, ಕಾನ್‍ಪುರ್, ಬೆಂಗಳೂರು, ಚಂಡೀಘರ್, ಹೈದರಾಬಾದ್, ಪಾಟ್ನಾ ಮತ್ತು ಜೈಪುರ. ಇದರ ಕಛೇರಿಗಳು ದೊಡ್ಡ ನಗರಗಳಲ್ಲಿ ಮಾತ್ರ ಇರುವುದರಿಂದ ಬಹಳಷ್ಟು ಜನರಿಗೆ ಇದರ ಉಪಯೋಗ ಲಭ್ಯವಾಗಿಲ್ಲದಿರುವುದು ರಿಸರ್ವ್ ಬ್ಯಾಂಕಿನ ಗಮನಕ್ಕೆ ಬಂದು ಅದು ಬೇರೆಡೆ ಅಂದರೆ ಸಣ್ಣ ನಗರ, ಪಟ್ಟಣಗಳಲ್ಲಿ ಆಗಾಗ್ಗೆ ಶಿಬಿರವನ್ನೇರ್ಪಡಿಸಿ ದೂರುಗಳನ್ನು ಆಹ್ವಾನಿಸುವುದು. ಆಯಾಯ ನಗರದ ಕಛೇರಿಗಳ ವ್ಯಾಪ್ತಿಯಲ್ಲಿ ಈ ಶಿಬಿರಗಳನ್ನು ನಡೆಸಿ ಪರಿಹಾರಕ್ಕೆ ಪ್ರಯತ್ನಿಸುವುದು. ಬ್ಯಾಂಕಿಂಗ್ ಓಂಬಡ್ಸ್‍ಮನ್ ಆಗಿ ನೇಮಕಗೊಂಡ ವ್ಯಕ್ತಿಯು ಒಬ್ಬ ಅನುಭವಿÀ ಹಾಗು ಪರಿಣಿತನಾಗಿದ್ದು, ಆತನು ನ್ಯಾಯಶಾಸ್ತ್ರ, ಬ್ಯಾಂಕಿಂಗ್, ಹಣಕಾಸಿನ ಸೇವೆಗಳು, ಸಾರ್ವಜನಿಕ ಆಡಳಿತ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿಷ್ಣಾತನಾಗಿದ್ದು, ಆತನ ಕಾಲಾವಧಿಯು ಮೂರು ವರ್ಷಗಳವರೆಗಿರುತ್ತದೆ. ಬ್ಯಾಂಕಿಂಗ್ ಓಂಬಡ್ಸ್‍ಮನ್‍ನ ವ್ಯಾಪ್ತಿಯು ಎಲ್ಲ ಬ್ಯಾಂಕಿಂಗ್ ಸೇವೆಗಳು, ಸಾಲ ಮತ್ತು ಮುಂಗಡಗಳು ಮೊದಲಾದವುಗಳಲ್ಲಿ ಹರಡಿರುತ್ತದೆ. == ದೂರುಗಳು == ಸಾಮಾನ್ಯವಾಗಿ ಬರುವ ದೂರುಗಳು, ಭಿನ್ನಾಭಿಪ್ರಾಯಗಳು ಈ ಕೆಳಗಿನ ವಿಷಯಗಳಲ್ಲಿರುತ್ತವೆ : ದೀರ್ಘಕಾಲದವರೆಗೂ ಪಾವತಿ ಲಭಿಸದ ವಸೂಲಿಗೆ ಕಳುಹಿಸಿದ ಚೆಕ್ಕುಗಳು, ಬಿಲ್ಲುಗಳು ಹಾಗು ಚೆಕ್ಕು ಪಾವತಿಯಲ್ಲಿನ ಅತಿ ವಿಳಂಬ. ಸಣ್ಣ ಮೌಲ್ಯವರ್ಗದ ನೋಟುಗಳನ್ನು, ಕೆಲವು ನಾಣ್ಯಗಳನ್ನು ಸ್ವೀಕರಿಸಲು ಬ್ಯಾಂಕು ಕಾರಣವಿಲ್ಲದೆ ನಿರಾಕರಿಸುವುದು ಮತ್ತು ಅಂತಹವುಗಳಿಗೆ ಶುಲ್ಕವನ್ನು ವಿಧಿಸುವುದು. ಬ್ಯಾಂಕು ಗ್ರಾಹಕರಿಗೆ ಮತ್ತು ಇತರರಿಗೆ ಡಿಮಾಂಡ್ ಡ್ರಾಫ್ಟ್ ನೀಡುವುದನ್ನು ನಿರಾಕರಿಸುವುದು. ನಿರ್ದಿಷ್ಟ ವ್ಯವಹಾರ ವೇಳೆಯನ್ನು ಪಾಲಿಸಲು ಬ್ಯಾಂಕಿನ ಶಾಖೆಗಳು ವಿಫಲವಾಗುವುದು. ಖಾತರಿ ಪತ್ರ, ಉದರಿ ಪತ್ರಗಳನ್ನು ನಿಯಮಕ್ಕನುಸಾರವಾಗಿ ಮಾನ್ಯ ಮಾಡಲು ವಿಫಲವಾಗುವುದು. ಗ್ರಾಹಕನ ಠೇವಣಿ ಖಾತೆಗಳಲ್ಲಿ ಬೇನಾಮಿ ಪಾವತಿಗಳು, ವಂಚನೆ ಪ್ರಕರಣಗಳು ಉಂಟಾಗಿ ನ್ಯಾಯ ಕೋರುವುದು. ನಿತ್ಯ ವ್ಯವಹಾರಗಳಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆಗಳಲ್ಲಿ ಕಂಡು ಬರುವ ಅನೇಕ ದೂರುಗಳು, ಬಡ್ಡಿ ದರದಲ್ಲಿನ ಅನ್ಯಾಯಗಳು ಮೊದಲಾದವುಗಳು. ರಫ್ತಾದ ಸರಕಿನ ಹಣ ಬರುವಲ್ಲಿನ ವಿಳಂಬ, ಬಿಲ್ಲು ಪಾವತಿಯಲ್ಲಿನ ವಿಳಂಬ ಮೊದಲಾದ ದೂರುಗಳನ್ನು ರಫ್ತುದಾರರು ನೀಡುವುದು. ಅನಿವಾಸಿ ಭಾರತೀಯರು ತಮ್ಮ ಎನ್.ಆರ್.ಐ ಹಾಗು ಇತರ ದೇಶೀಯ ಖಾತೆಗಳಲ್ಲಿನ ಅನೇಕ ತೊಂದರೆಗಳು, ಸಮಸ್ಯೆಗಳ ಬಗ್ಗೆ ದೂರು ನೀಡುವುದು. ಸಾಲ ಮುಂಗಡಗಳ ಮೇಲಿನ ಬಡ್ಡಿ ದರ ವಿಧಿಸುವಲ್ಲಿ ರಿಸರ್ವ್ ಬ್ಯಾಂಕಿನ ನಿಯಮಗಳನ್ನು ನಿರ್ಲಕ್ಷಿಸುವುದು. ಸಾಲ ಕೋರಿಕೆ ಪತ್ರಗಳನ್ನು ವಿಲೇವಾರಿ ಮಾಡುವಲ್ಲಿನ ಅತಿ ವಿಳಂಬ, ವೃಥಾ ಅಲೆದಾಟ, ಸಿಬ್ಬಂದಿ/ಅಧಿಕಾರಿಗಳ ಧೋರಣೆ, ನಿರ್ಲಕ್ಷ್ಯ ಮೊದಲಾದವುಗಳು. ಸಾಲ ಮುಂಗಡಗಳು ನೀಡುವಲ್ಲಿನ ಅನೇಕ ನಿರ್ಲಕ್ಷ್ಯ ನಡವಳಿಕೆಗಳು, ವಂಚನೆ, ಮೋಸ ಪ್ರಕರಣಗಳು ಇತ್ಯಾದಿ. ಮತ್ತು ರಿಸರ್ವ್ ಬ್ಯಾಂಕ್ ಆಗಾಗ್ಗೆ ಪ್ರಕಟಿಸುವ ಇತರ ಯಾವುದೇ ವಿಷಯಗಳು. == ದೂರುಗಳ ಸ್ವೀಕಾರ ಮತ್ತು ನಿರ್ಣಯಗಳ ವಿಧಿ-ವಿಧಾನಗಳು == ಯಾವುದೆ ಬ್ಯಾಂಕಿನ ಸೇವೆಯಲ್ಲಿನ ಅತೃಪ್ತಿಯ ಬಗ್ಗೆ ವ್ಯಕ್ತಿಯು ನೇರವಾಗಿ ಓಂಬಡ್ಸ್‍ಮನ್‍ಗೆ ಮಧ್ಯಸ್ತಿಕೆ ಕೋರಿ ಪತ್ರ ಬರೆಯಬಹುದು. ಅಲ್ಲಿನ ನಿರ್ದಿಷ್ಟ ನಮೂನೆಯಂತೆ ದೂರನ್ನು ಸಲ್ಲಿಸಬೇಕು. ಅದಕ್ಕೆ ಆಧಾರ, ಪೂರಕವಾದ ದಾಖಲೆಗಳ ಮೂರು ಪ್ರತಿಗಳನ್ನು ಲಗತ್ತಿಸಿರಬೇಕು. ಓಂಬಡ್ಸ್‍ಮನ್ ನಿರ್ಧಾರ, ನಿರ್ಣಯಗಳನ್ನು ಪಾಲಿಸುವುದಾಗಿ ದೃಢೀಕರಿಸಿರಬೇಕು. ನೊಂದ ವ್ಯಕ್ತಿಯು ತಾನೇ ನ್ಯಾಯ ಕೋರಿ ದೂರು ಸಲ್ಲಿಸಬಹುದು ಅಥವಾ ಕಾರಣಾಂತರಗಳಿಂದ ಓಂಬಡ್ಸ್‍ವiನ್‍ಗೆ ಓಡಾಡಲಾಗದಿದ್ದಲ್ಲಿ ತನ್ನ ಪ್ರತಿನಿಧಿಯನ್ನು ನಮೂನೆಯಲ್ಲಿ ವಿವರಗಳೊಂದಿಗೆ ನಮೂದಿಸಬಹುದು. ವ್ಯಕ್ತಿಯಿಂದ ದೂರು ಸ್ವೀಕೃತವಾದ ಮೇಲೆ ಓಂಬಡ್ಸ್‍ಮನ್ ಸಂಬಂಧಿಸಿದ ಬ್ಯಾಂಕಿನಿಂದ ಮಾಹಿತಿಯನ್ನು ಪಡೆಯಲು ಅಧಿಕಾರವಿದೆ. ಬ್ಯಾಂಕುಗಳು ಓಂಬಡ್ಸ್‍ಮನ್ ಕೇಳಿದ ದಾಖಲೆ ಪತ್ರಗಳ ಪ್ರತಿಗಳನ್ನು, ಮಾಹಿತಿಯನ್ನು ನೀಡಲೇಬೇಕು. ಅವೆಲ್ಲವುಗಳನ್ನು ರಹಸ್ಯವಾಗಿಡುವ ಕರ್ತವ್ಯವು ಓಂಬಡ್ಸ್‍ಮನ್‍ದಾಗಿರುತ್ತದೆ. ಓಂಬಡ್ಸ್‍ಮನ್ ಮೂರು ರೀತಿಯಲ್ಲಿ ಈ ವಿವಾದ, ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. ದೂರು ನೀಡಿದವನಿಗೂ ಮತ್ತು ಬ್ಯಾಂಕಿಗೂ ಮಧ್ಯಸ್ತಿಕೆ ವಹಿಸಿ ರಾಜಿಗೆ ಪ್ರಯತ್ನಿಸುವನು. ಈ ರಾಜಿ ಪ್ರಯತ್ನವು ವಿಫಲವಾದಲ್ಲಿ, ಓಂಬಡ್ಸ್‍ಮನ್‍ನು ಈರ್ವರಿಗೂ ತನ್ನ ಶಿಫಾರಸ್ಸು ಗಳನ್ನು ತಿಳಿಸಿ ಎರಡು ವಾರಗಳೊಳಗೆ ಈರ್ವರೂ ತೀರ್ಮಾನಕ್ಕೆ ಬಂದು ಒಪ್ಪುವಂತಿದ್ದರೆ ಬರೆಹರಿಸುವುದಾಗಿ ಸೂಚಿಸುವನು. ಈ ಶಿಫಾರಸ್ಸು ಬ್ಯಾಂಕು ಅಥವಾ ವ್ಯಕ್ತಿ ಒಪ್ಪದಿದ್ದಲ್ಲಿ ತಾನೇ ನ್ಯಾಯಾಧೀಶನಂತೆ ಮಧ್ಯೆ ಬಂದು ಈರ್ವರಿಗೂ ಸಮಾನ ಅವಕಾಶ ನೀಡಿ ಅಹವಾಲುಗಳನ್ನು ಮಂಡಿಸಲು ಹೇಳಿ ನಂತರ ತನ್ನ ತೀರ್ಪನ್ನು ಆದೇಶವಾಗಿ ಬರಹ ಮೂಲಕ ತಿಳಿಯಪಡಿಸುವನು. ಓಂಬಡ್ಸ್‍ಮನ್ ಯಾವುದೇ ವಿವಾದದÀ ಮೊತ್ತವು ಹತ್ತು ಲಕ್ಷರೂ. ಗಳಿಗಿಂತ ಹೆಚ್ಚಿದ್ದರೆ ಅದನ್ನು ಸ್ವೀಕರಿಸುವಂತಿಲ್ಲ ಯಾಕೆಂದರೆ ಬ್ಯಾಂಕಿಂಗ್ ಓಂಬಡ್ಸ್‍ಮನ್ ಯೋಜನೆಯ ಮಿತಿಯನ್ನು ಹತ್ತು ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಅಲ್ಲದೆ ಓಂಬಡ್ಸ್‍ಮನ್ ನೀಡಿದ ತೀರ್ಪಿನ ಆದೇಶವನ್ನು ಬ್ಯಾಂಕು ಪಾಲಿಸಲೇ ಬೇಕೆಂಬುದೇನಿಲ್ಲ. ಆದರೆ ದೂರು ನೀಡಿದಾತನು ತೀರ್ಪು ಬಂದ ಒಂದು ತಿಂಗಳೊಳಗೆ ಓಂಬಡ್ಸ್‍ಮನ್‍ಗೆ ಲಿಖಿತ ಪತ್ರದ ಮೂಲಕ ತನ್ನ ವ್ಯಾಜ್ಯದ ಪೂರ್ಣ ಪರಿಹಾರ ಈ ತೀರ್ಪಿನ ಮೂಲಕ ಬರುವುದಕ್ಕೆ ತನ್ನ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದ ಮೇಲೆ ಅದು ಬ್ಯಾಂಕಿಗೆ ನಿರ್ಬಂಧವಾಗುತ್ತದೆ. ಅಂದಿನಿಂದ 15 ದಿನಗಳೊಳಗೆ ಬ್ಯಾಂಕು ಓಂಬಡ್ಸ್‍ಮನ್ ತೀರ್ಪಿನ ಆದೇಶವನ್ನು ಪಾಲಿಸಲೇ ಬೇಕು. ಹಾಗಾಗದೆ ಅದು ಅದನ್ನು ತಿರಸ್ಕರಿಸಿದಲ್ಲಿ ಓಂಬಡ್ಸ್‍ಮನ್ ಇದನ್ನು ನೇರವಾಗಿ ರಿಸರ್ವ್ ಬ್ಯಾಂಕಿಗೆ ವರದಿ ಮಾಡಬೇಕು. ಅದೇ ರೀತಿ ಓಂಬಡ್ಸ್‍ಮನ್ ತನಗೆ ಬಂದ ದೂರನ್ನು ಸಕಾರಣವಾಗಿ ತಿರಸ್ಕರಿಸಬಹುದು. ದೂರು ನೀಡಿದ ವ್ಯಕ್ತಿ ಸಮರ್ಪಕ ಕಾರಣ ವಿವರಿಸದೆ ಅಥವಾ ಅದಕ್ಕೆ ಸಮರ್ಥನೀಯವಾದ ದಾಖಲೆ, ಪುರಾವೆಗಳನ್ನು ಒದಗಿಸದಿದ್ದಲ್ಲಿ ಅಂತಹ ದೂರು ಸ್ವೀಕಾರಾರ್ಹವಾಗುವುದಿಲ್ಲ. ವರ್ಷಕ್ಕೊಮ್ಮೆ ಓಂಬಡ್ಸ್‍ಮನ್ ತನ್ನ ಅಧಿಕಾರಾವಧಿಯಲ್ಲಿ ನಡೆದ ನಡೆದ ಎಲ್ಲ ಚಟುವಟಿಕೆಗಳ ಬಗ್ಗೆ ವಿವರವಾದ ವರದಿಯನ್ನು ರಿಸರ್ವ್ ಬ್ಯಾಂಕ್‍ನ ಗವರ್ನರ್‍ಗೆ ಸಲ್ಲಿಸಬೇಕು. ಇದು ಕಡ್ಡಾಯವಾದ ನಿಯಮವಾಗಿದೆ. ಈ ಬ್ಯಾಂಕಿಂಗ್ ಓಂಬಡ್ಸ್‍ಮನ್‍ಗೆ ಕೋರ್ಟಿನ ಅಧಿಕಾರ, ಮಾನ್ಯತೆ ಇಲ್ಲದಿರುವುದರಿಂದ ಇದು ಯಾವಾಗಲೂ ಯಶಸ್ವಿ ಎಂದು ಹೇಳಲಾಗುವುದಿಲ್ಲ. ಗ್ರಾಹಕ ದೂರು ವಿಚಾರಣ ಮಂಡಲಿಯಷ್ಟು ಪ್ರಬಲವೂ ಇಲ್ಲದ ಇದು ಅಷ್ಟೇನೂ ಶಕ್ತಿಯುತವಲ್ಲ. ಗ್ರಾಹಕ ಮಂಡಳಿ ಅಥವಾ ನ್ಯಾಯಲಯದಷ್ಟು ಓಂಬಡ್ಸ್ ಮನ್ ಬಲಯುತವಾಗುವಂತೆ ನಿಯಮಗಳನ್ನು ತಂದಲ್ಲಿ ಬಹಳ ಯಶಸ್ವಿಯಾಗುತ್ತದೆ. == ಉಲ್ಲೇಖಗಳು ==